ಕನಸುಗಳೇ ಹೀಗೆ

ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ
ನನ್ನ ಪಕ್ಕದಲಿ ನೀನು ಕುಳಿತಂತೆ
ಹೇಗೆ ಮೋಹಗೊಂಡೆನೋ ಏನೋ, ರಾತ್ರಿ
ಬಾಗಿಲು ತಟ್ಟಿದ ಸಪ್ಪಳಕೆ ಬಿಚ್ಚಿದೆ
ತೆರೆದೆ ಬಾಗಿಲನು, ಸುಳಿಗಾಳಿ ಮೈ ಸೋಕಿದಾಗ
ಮನದಲ್ಲಿ ಹಾವು ಹರಿದಾಡಿದಂತಾಗಿ
ಹಾಸಿಗೆಯಲಿ ಪುನಃ ಒರಗಿದೆ, ದುಗುಡತೆಯಿಂದಲಿ
ನೀನಿಲ್ಲದ ಈ ಮನ ಹಾಳಾದ ಬೋರು
ಈ ಜೀವಕೆ ಪ್ರಾಣವಾಯು ನೀನು
ಕತ್ತಲಲಿ ಕುಳಿತು ಹುಡುಕಾಡಿದೆ ನಿನ್ನಾಬಿಂಬ
ನೀನಿಲ್ಲದೆ ಎನ್ನ ಹೃದಯ ಕಡು
ಬೇಸಿಗೆಯ ನದಿಯಂತೆ
ಇಷ್ಟೇ ಸಾಕೆನೆಗೆ
ಸಿಡಿಲು ಬಡಿದ ಮರದಂತಾಗಲು

ನಿನ್ನಾ ಹೆಸರ್‍ಹೇಳಿದರಷ್ಟೇ
ಎನಗೆ ಮಾನ ಸಮ್ಮಾನ ಸ್ವರ್ಗದಲಿ
ನೀ ಬಂದರೆ ವಿವಷವಾದ ಮನಕೆ, ಸಂಭ್ರಮದ
ಸಂತಸದ ಮಹಾದಾನಂದದ ಹೊನಲು
ಅತ್ತಿತ್ತ ಹೊರಳಾಡಿದರೆ ಬರುವುದೇ ನಿದ್ದೆ
ನೀನು ನನ್ನ ಪಕ್ಕದಲ್ಲಿದ್ದಂತೆ
ನಿನ್ನಾ ಹೆಜ್ಜೆಯ ಗೆಜ್ಜೆ ನಾದಕೆ
ಅಡುಗೆ ಮನೆಯ ಬಳೆಯ ಸದ್ದಿಗೆ
ಬಂದು ನೋಡಿದರೆ
ಕನಸೇ

ಹೂವು ಮುಡಿಸಿದಂತೆ
ಕೆನ್ನೆ ಸವರಿದಂತೆ
ನೀನಿಲ್ಲದಿದ್ದರೆ ಮನದ ಜ್ಯೋತಿ ಏಕೆ?
ದೀವಟಿಗೆಯು ಕೂಡ ಹೊತ್ತಲೊಲ್ಲದು
ಬಾ ಬೇಗ, ಪ್ರೀತಿಯ ತುಂತುರಿನ ಸಿಂಚನ ನೀಡು
ಸ್ನಾನಕ್ಕಿಟ್ಟು ಬಕೆಟ್ ನೀರಿನಲ್ಲಿ ನಿನ್ನ ಕಾಣುವೆ
ರಾತ್ರಿಯೆಲ್ಲಾ ಹೀಗೆ ಕನಸು ನಿಲ್ಲಲಾರವು
ಜೊಂಪು ಹತ್ತುವುದು, ಪುನಃ ಎಚ್ಚರವಾಗುವುದು
ನಡುವೆ ಒಂದೊಂದೇ ಕನಸು.
ರಾಜ ರಾಣಿಯರ ಕನಸಿನ ಸೊಗಸುಗಾರಿಕೆ
ಆನೆ ಅಂಬಾರಿಯಲಿ ನಿನ್ನಾಪಕ್ಕದಲ್ಲಿ ನನ್ನ ಕಂಡದ್ದು
ಅಂತಃಪುರದ ಪಲ್ಲಂಗದಲಿ ಆಕೆಯ ಕಂಡರೆ
ಕನಸೇ

ಸಾವೇ ಇಲ್ಲದ ಕನಸುಗಳು
ಓ, ಕನಸುಗಳೇ ಬನ್ನಿ!
ಜೀವ ಕೊಡಿ ಈ ಶಿಲ್ಪಕೆ
ಚೆಂದುಳ್ಳ ಕನಸುಗಳೇ
ನಿಮ್ಮ ಜೊತೆಗೆ ಚದುರಂಗದಾಟವೇ
ಹಣೆ ಕಪೋಲದ ಮೇಲೆ ಸುಳಿದಾಡಿ
ಮನವ ಅಲ್ಲೋಲ ಕಲ್ಲೋಲ ಮಾಡಿ
ಕದ್ದು ಮಾಯವಾಗುವ ಕನಸುಗಳೇ
ಆ ಕನಸುಗಳಲಿ ಕಾಂತೆಯ ಕಂಡು
ಬೆಚ್ಚಿಬಿದ್ದು ಮುಖವೆತ್ತಿ ನೋಡಿದರೆ
ಕನಸೇ

ಏನೂ ಕಾಣದಿದ್ದರೂ ಮನದಲ್ಲೇನೋ ಸಂತಸ
ಸ್ವಪ್ನಗಳೇ ಹೀಗೆ
ಮುಗಿಯಲೊಲ್ಲವು
ಕಾಡುವುದನು ಬಿಡಲೊಲ್ಲವು
ಕಣ್ಣು ತೆರೆದು ಕುಳಿತರೆ ಬೇರೊಂದು ಕನಸು
ಅಂಬಾರಿಯಿಲ್ಲ, ಸಂಭ್ರಮವಿಲ್ಲ
ಯಾರ ಬಿಂಬವೂ ಇಲ್ಲ, ಹೆಜ್ಜೆಯ ಗೆಜ್ಜೆನಾದವಿಲ್ಲ,
ಬಳೆ ಸಪ್ಪಳವಿಲ್ಲ, ಮುಖದಲಿ
ಸಂತಸ, ನಗು ಮೊದಲಿಲ್ಲ,
ಬಸ್ಸು, ಕಾರು, ಓಡಿದ ಸಪ್ಪಳ
ಜನಗಳ ಮಾತು, ಗದ್ದಲದ ನಡುವೆ
ಪಕ್ಕದ ಮನೆಯ ರೇಡಿಯೋ ಹಾಡಿಗೆ
ಹೋಯಿತು ಮನ
ಜಾರಿದವು ಕನಸುಗಳು
ಜಾರಿದವು ಕನಸುಗಳು.
*****
೧೯೯೮ ರ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಡೆರಹಿತ ಬಸ್
Next post ಮೆಣಸಿನ ಲಚ್ಚಮ್ಮ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys